Skip to main content

ಅಂದು ಮತ್ತು ಇಂದು .

ಒಂದು ವರ್ಷ ಆಯ್ತು ಮನೆಯಿಂದ ದೂರ  ಇದ್ದು. ಒಂದು ವರ್ಷದೊಳಗೆ ಹಲವಾರು ರೀತಿಯ ಜನರನ್ನು ಭೇಟಿಯಾದರೂ , ಬೇರೆ ಬೇರೆ ಸಂಸ್ಕೃತಿಯ ಪರಿಚಯವಾದರೂ ನಾವು ಹುಟ್ಟಿ ಬೆಳೆದ  ಊರಿನ  ಬದುಕಿನ ಶೈಲಿ, ಅಲ್ಲಿನ ಸಂಸ್ಕೃತಿಯೇ ನಮಗೆ ಶ್ರೇಷ್ಠವೆನಿಸುತ್ತದೆ. ಮನೆಯಲ್ಲಿ ಇರ್ಬೇಕಿದ್ರೆ ಅಮ್ಮ ಉಪ್ಪಿಟ್ಟು ಮಾಡಿದರೆ ಅಯ್ಯೋ ಉಪ್ಪಿಟ್ಟಾ ಎಂದು, ದೋಸೆ ಮಾಡಿದರೆ ದಿನಾಲು ದೋಸೆ ಯಾಕಮ್ಮ ನಿನ್ನೆ  ತಾನೇ ಮಾಡಿದ್ರಿ ಎಂದು ಅಮ್ಮನ ಮೇಲೆ ರೇಗಿಬಿಡುವುದು ರೂಢಿಯಾಗಿತ್ತು. ಸೌತೆಕಾಯಿ ಪಲ್ಯವಾದರೆ ಹಸಿವಿಲ್ಲ ಎಂದು ಹಸಿವಲ್ಲೇ ಮಲಗಿಬಿಡುವುದೂ ಇತ್ತು. ಆದರೆ ಇಂದು
ಬೆಳಗ್ಗಿನಿಂದ ರಾತ್ರಿಯವರೆಗೂ ಮೂರುಹೊತ್ತೂ ರೋಟಿ-ದಾಲ್ ತಿಂದರೂ ಬೇಸರವಿಲ್ಲ. ಬೇಸರವಿಲ್ಲ ಎನ್ನುವುದಕ್ಕಿಂತ ಅದಕ್ಕೆ ಒಗ್ಗಿಕೊಂಡುಬಿಟ್ಟಿದೇನೆ ಎಂದರೆ ಸರಿಯಾದೀತು. ಈಗ ಮನೆಗೆ ಹೋದರೆ ಅಮ್ಮ ಗಂಜಿ ಊಟ ಬಡಿಸಿದರೂ ಹಬ್ಬದೂಟ ತಿಂದಷ್ಟು ತೃಪ್ತಿ.

ಏಳಲು ಅಲಾರ್ಮ್ ಬೇಕಿರಲಿಲ್ಲ, ಹಕ್ಕಿಗಳ ಇಂಚರಕ್ಕೆ ಅಮ್ಮ ಎದ್ದರೆ, ಅಮ್ಮನ ಧ್ವನಿಗೆ ಮಕ್ಕಳೆಲ್ಲಾ ಎದ್ದು ಬಿಡುತಿದ್ವಿ. ಎದ್ದು ಹೋಗಿ ಮನೆ ಹೊರಗೆ ಜಗಲಿಯಲ್ಲಿ ಕೂತು ಸೂರ್ಯೋದಯ, ಗದ್ದೆಯಲ್ಲಿ ಭತ್ತದ ತೆನೆ, ಅಂಗಳದಲ್ಲಿ ಅರಳಿ ನಿಂತ ಹೂವು, ಗದ್ದೆಯ ಬದಿಯಿಂದ ಸಾಲಾಗಿ ಹೋಗುತ್ತಿರುವ ನವಿಲುಗಳನ್ನು ನೋಡ್ಕೊಂಡು  ಕುಳಿತುಕೊಳ್ಳುವದು ದಿನಚರಿ. ಹಾಗೆ ಕುಳಿತುಕೊಂಡರೆ ಮತ್ತೆ ಏಳುವುದು 'ಕಾಲೇಜಿಗೆ ನಂಗೆ ಹೋಗ್ಲಿಕ್ಕಾ  ಅಲ್ಲಾ  ನಿನಗ  , ಹೊರಡುವ ಯೋಚನೆ ಇಲ್ವಾ' ಎಂದು ಅಮ್ಮ  ಬೈದಾಗ್ಲೇ . ಈಗ ಎಚ್ಚರ ಆಗುವದು ಅಡಿಗೆಯವರು ಬೆಲ್ ಹೊಡೆದಾಗ್ಲೇ ಇಲ್ವೇ ಮೊಬೈಲ್ ಅಲಾರ್ಮ್ ಹೊಡೆದಾಗ್ಲೇ. ಎದ್ದು  ಹೊರಗೆ ನೋಡಿದರೆ  ಮನೆ ಕಂಪೌಂಡ್, ಪಕ್ಕದ ಮನೆಯ ಗೋಡೆ ಹಾಗು ಅಲ್ಲಿ ನಿಂತ ವಾಹನಗಳನ್ನು ಬಿಟ್ರೆ ಇನ್ನೇನಿಲ್ಲ .

ಅಂದು
ಇಂದು


ಕಾಲೇಜಿಗೆ ಹೋಗ್ಬೇಕಿದ್ರೆ ಬಸ್ಸು ಬರಲು ಹತ್ತು ನಿಮಿಷ ಇರುವಾಗ ರೆಡಿಯಾಗುತ್ತಿದ್ದಂತೆ ಮಧ್ಯದಲ್ಲಿ ಅಣ್ಣ ತಂಗಿಯೊಡನೆ ಏನಾದರೊಂದು ಕಾರಣಕ್ಕೆ ವಾದ ವಿವಾದವಾಗಿ ಬಸ್ಸಿಗೆ ಎರಡು ನಿಮಿಷ ಇರುವಾಗ ಮನೆಯಿಂದ ಓಡಿಬಿಡುತಿದ್ದೆ. ಓಡಿ ಹೋಗಿ ಬಸ್ ಹತ್ತಿ ಸುಸ್ತಾದ್ರೂ, ಬಸ್ಸಲ್ಲಿದ್ದ ಹಲವಾರು ಪರಿಚಯ ಮುಖಗಳನ್ನು ನೋಡಿ ಪರಿಚಯದ ನಗೆ ಬೀರಿ ಸೀಟಲ್ಲಿ ಕೂತು ಪಕ್ಕದಲ್ಲಿ ಕೂತವರೊಡನೆ ಮಾತಿಗಿಳಿದರೆ ಇಳಿಯುವ ಸ್ಟಾಪ್ ಬಂದಾಗಲೇ ಮಾತು ಸ್ಟಾಪ್ ಆಗುತಿದದ್ದು. ಆದರೆ ಇವತ್ತು ಮನೆಯಿಂದ ಹೊರಡ್ಬೇಕಿದ್ರೆ ವಾಯು ಮಾಲಿನ್ಯದಿಂದ ಮುಖಕ್ಕೆ ಏನಾದರೂ ಆಗ್ಬಹುದು ಎಂಬ ಭಯದಿಂದ ಮುಖಕ್ಕೆ ಸ್ಕಾರ್ಫ್ ಕಟ್ಟಿಕೊಂಡು ಹೋದರೆ ಬಸ್ಸಿನಲ್ಲಿ ಇರುವ ಎಲ್ಲಾ ಹುಡಿಗಿಯರ ಕಣ್ಣು ಮಾತ್ರ ಕಾಣುತ್ತಿರುತ್ತದೆ. ಆಫೀಸಿನಲ್ಲಿ ಬದಿಯಲ್ಲೇ ಕೂರುವ ಹುಡುಗಿಯಿದ್ದರೂ ಪರಿಚಯವಾಗುವುದಿಲ್ಲ. ಆಫೀಸ್ ತಲುಪುವ ತನಕ ಮಾತಿಲ್ಲ ಕತೆಯಿಲ್ಲ. ಮೊಬೈಲ್ ಹಿಡ್ಕೊಂಡು ಎಲ್ಲರೂ ಅವರವರ ಲೋಕದಲ್ಲೇ ಮಗ್ನರಾಗಿಬಿಡುತ್ತಾರೆ. ಊರಲ್ಲಿ ಬಸ್ಸಲ್ಲಿ ಹೋಗ್ಬೇಕಿದ್ರೆ ಕಂಡಕ್ಟರ್  'ಪಡುಬಿದ್ರೆ, ಎರ್ಮಾಳ್ ಉಚ್ಚಿಲ ಕಾಪು ಕಟಪಾಡಿ ಉದ್ಯಾವರ ಉಡುಪಿ ಉಡುಪಿ ಉಡುಪಿ' ಎಂದು ಕಿವಿ ಬದಿಯಲ್ಲೇ  ಒಂದೇ ಉಸಿರಲ್ಲಿ ಅರಚುತ್ತಿರುತ್ತಾರೆ. ಪ್ರಯಾಣದುದ್ದಕ್ಕೂ ಅವ ಹೇಳದಿದ್ದರೂ ನಮ್ಮ ತಲೆಯಲ್ಲಿ ಅದೇ ಪ್ರತಿಧ್ವನಿಸುತ್ತಿತ್ತು. ಇಂದು ಹಾರ್ನ್ಒಂದು ಬಿಟ್ಟು ಏನು ಕೇಳಿಸುವುದಿಲ್ಲ.

ಸಂಜೆ ಮನೆಗೆ ತಲುಪಿದ ಕೂಡಲೇ ಅಂಗಳದಲ್ಲೇ ನಿಂತ್ಕೊಂಡು ಅಮ್ಮ ಎಂದು ಕರೆಯುತ್ತಾ, ಅವರು ಕಾಣದಿದ್ದಾಗ ಮನೆಗೆ ಎರಡು ಸುತ್ತು ಹಾಕಿದ್ದೂ ಉಂಟು. ಮನೆಗೆ ತಲುಪಿದೊಡನೆ ಅಮ್ಮನ ಮುಖ ನೋಡಿದರೆ ಏನೋ ಒಂದು ರೀತಿಯ ಸಮಾಧಾನ ಹಾಗೂ ಅಂಗಳದಲ್ಲೇ ಇದ್ದುಕೊಂಡು ಬ್ಯಾಗೂ ಕೆಳಗಿಡದೆ ಇಂದು  ಅಡಿಗೆ ಏನು ಮಾಡಿದ್ದೀರಾ ಎಂದು ಕೇಳಿ ಮನೆಯೊಳಗೇ ಹೋಗುತ್ತಿದ್ವಿ. ಅದೇ ಈಗ ಸಂಜೆ ಮನೆಗೆ ತಲುಪಿದಂತೆ ಕೋಣೆ ಬಾಗಿಲು ಮುಚ್ಕೊಂಡು ಮೊಬೈಲ್, ಲ್ಯಾಪ್ಟಾಪ್ ಹಿಡಿದು  ಕೂತರೆ ರಾತ್ರಿ ಹಸಿವಾದಾಗ ಹೋಗಿ ಅಡಿಗೆಯವರು ಮಾಡಿಟ್ಟಿದ್ದನ್ನು ತಿಂದು ಮಲಗಿಬಿಡುತ್ತೇನೆ. ಉಪ್ಪು ಕಮ್ಮಿಯಾದ್ರು ಸೇರುತ್ತದೆ, ಖಾರ ಜಾಸ್ತಿಯಾದ್ರು ಸೇರುತ್ತದೆ.

ಹೀಗೆ ಬೆಳಿಗ್ಗೆ ಏಳುವುದರಿಂದ ಹಿಡಿದು ರಾತ್ರಿ ಮಲಗುವ ತನಕದ ದಿನಚರಿಯೇ ಬದಲಾಗಿಬಿಟ್ಟಿದೆ. ಎಲ್ಲೊ ಏನೋ ನನ್ನನ್ನೇ ನಾನು ಕಳೆದು ಕೊಂಡಿದ್ದೇನೋ ಏನೋ ಎಣಿಸುತ್ತಿದಂತೆ, ನೆನಪಾದದ್ದು ಅಪ್ಪನನ್ನು. ಕೆಲಸದ ನಿಮಿತ್ತ, ಚಿಕ್ಕ ವಯಸ್ಸಲ್ಲೇ ಪರ ಊರಿಗೆ ಹೋಗಿದ್ರು. ಈಗ ನಮಗೆ ಅಪ್ಪ ಅಮ್ಮ ನನ್ನು ಎಣಿಸಿದ್ರು ಎಲ್ಲೇ ಇದ್ದರು ಫೋನ್ ಮಾಡಿ ಮಾತಾಡಿಸಬಹುದು. ಆದರೆ ಮುಂಚೆ ಅಷ್ಟೊಂದು ಸೌಕರ್ಯಗಳು ಇಲ್ಲದ ಕಾರಣ ಅವರು ಮನೆಗೆ ಫೋನ್ ಮಾಡಿ  ಮಾತಾಡಿಸುತಿದ್ದದ್ದು ವಾರಕೊಮ್ಮೆ. ವರ್ಷಕೊಮ್ಮೆ ಊರಿಗೆ ಬರುತ್ತಿದ್ರು. ಒಂದು ವರ್ಷದೊಳಗೆ ಅಮ್ಮ ಇಲ್ಲಿ ಅದು ಸರಿ ಇಲ್ಲ , ಅಪ್ಪ ಇದು ಸರಿ ಇಲ್ಲ ಎಂದು ಅವರೊಡನೆ ಎಷ್ಟು ಸಲ ದೂರಿತ್ತಿದೆನೋ ಲೆಕ್ಕವಿಲ್ಲ. ಪರಊರಿಗೆ ಹೋಗಿ ಇಂದಿಗೆ ನಲವತ್ತು ವರ್ಷಗಳಿಂದ ಮೇಲಾದ್ರು  ಅಪ್ಪನ ಬಾಯಿಂದ ಒಂದು ದೂರು ಕೇಳಲಿಲ್ಲ. ತಮ್ಮ ಕುಟುಂಬವನ್ನು ಸಾಕುವ ಜವಾಬ್ದಾರಿಯತ್ತ ಅವರಿಗಿರುವ ಲಕ್ಷ್ಯವೇ ಅವರನ್ನು ಪ್ರೇರಣಿಸುತ್ತಿರಬೇಕು. ಹೀಗೆ ದಿನಚರಿಯಲ್ಲಿ ಆದ ಬದಲಾವಣೆಗಳನ್ನು ಎಣಿಸುವಾಗ "ಒಂದನ್ನು ಪಡೆಯಬೇಕಿದ್ರೆ ಇನ್ನೊಂದನ್ನು ಕಳೆದುಕೊಳ್ಳಬೇಕಾಗುತ್ತದೆಂ" ಎಂಬ ಮಾತು ನೆನಪಾಗುತ್ತದೆ.

                                                                                                                     - ಸುಪ್ರೀತಾ

Comments

  1. Idhu neevu barrdudaralli nanna necchina lekhana!!Hindina nenapugalannu hasiyagisidiri! Dhanyavadagalu 😄

    ReplyDelete
  2. its soo true... evry word of it s a xperience... vry gud1... suprb.. keep goin

    ReplyDelete

Post a Comment

Popular posts from this blog

ಸ್ಪೂರ್ತಿ

ಮುಂಜಾನೆ ಎದ್ದು ಸ್ನಾನ ಮಾಡಿ ಬಂದು ಮೊಬೈಲ್ ನೋಡಿದರೆ ಆರು ಮಿಸ್ಸ್ಡ್ ಕಾಲ್ಸ್ ಇದ್ವು. ಕರೆ ಮಾಡಿದೆ. ಆಚೆಯಿಂದ "ಅಕ್ಕ ಇವತ್ತು ಏಕ್ಸಾಮ್ ಬರೀಲೀಕ್ಕೆ ಬರ್ತಿದ್ದೀರಿ ತಾನೇ ?" ಎಂದು  ಹುಡುಗಿ ಗಾಬರಿ ಸ್ವರದಲ್ಲಿ ಕೇಳಿದಳು. "ಹೌದು ! ಹೊರಡ್ತಿದ್ದೀನಿ." ಎಂದು ಸಮಾಧಾನಿಸಿ ಫೋನ್ ಪಕ್ಕಕ್ಕಿಟ್ಟು, ಬೇಗನೆ ತಯಾರಾಗಿ ರೂಮಿನಿಂದ ಹೊರಡಿದೆ. ಅದು ೪೫ ನಿಮಿಷಗಳ ಪ್ರಯಾಣ. ಅಷ್ಟರಲ್ಲಿ ಮೂರ್ನಾಲ್ಕು ಸಲ ನಾನು ಎಲ್ಲಿದ್ದೀನಿ ಎಂದು ವಿಚಾರಿಸಲು ಕರೆ ಮಾಡಿದ್ದಳು. ೮:೪೫ ಗೆ ತಲುಪಬೇಕಿತ್ತು. ೮:೩೦ ಗೆ ನೇ ತಲುಪಿದ್ದೆ. ಕಾಲೇಜು ಹೊರಗೆ ತನ್ನ ಗೆಳತಿಯೊಟ್ಟಿಗೆ ಕಾದು ನಿಂತಿದ್ದಳು.  "ಹಾಯ್, ಸ್ಪೂರ್ತಿ ತಾನೇ ? " ಅಂದೆ. "ಹೌದಕ್ಕಾ, ಬಂದ್ರಾ. ಹೇಗೆ ಪರಿಚಯವಾಯ್ತು . ನಾವು ಎಂದೂ ಭೇಟಿಯಾಗಿಲ್ಲ ಅಲ್ವಾ" ಎಂದಾಗ, ಅಲ್ಲಿರುವ ಜನರಿಗಿಂತ ಭಿನ್ನವಾಗಿ ಅವಳು ಇದ್ದುದ್ದರಿಂದ ಪರಿಚಯವಾಯ್ತು ಎಂದು ಹೇಳಲು ಮನಸ್ಸಾಗಲಿಲ್ಲ. ಸುಮ್ನೆ ಅವಳ ಬೆನ್ನು ತಟ್ಟಿ ನಕ್ಕು ಬಿಟ್ಟೆ. "ಸಾರೀ ಅಕ್ಕ, ತುಂಬಾ ಸಲ ಕಾಲ್ ಮಾಡಿದೆ. ಮೊನ್ನೆ ನನ್ನ ಗೆಳತಿಗೆ ಒಬ್ರು ಏಕ್ಸಾಮ್ ಬರೀಲಿಕ್ಕೆ ಬರ್ತೇನೆ ಹೇಳಿ ಬಂದಿರ್ಲಿಲ್ಲ. ಅದ್ಕೆ ಗಾಬರಿಯಾಗಿದ್ದೆ " ಅಂದ್ಲು. ಕಾಲೇಜು ಒಳಗೆ ಹೋಗಿ ರೂಮ್ ಹುಡುಕಿ ಅಲ್ಲಿ ಕೂತು ಮಾತಾಡಲು ಶುರು ಮಾಡಿದ್ವಿ. ಸ್ವಲ್ಪ ಹೊತ್ತಾದ ನಂತರ ಸ್ಪೂರ್ತಿ ಹಾಗು ಅವಳ ಗೆಳತಿಯಂತೆ ಏಳೆಂಟು ಜನ ತಮ್ಮ ಬ...

ಫೀಸ್ ಜಾಸ್ತಿಯಾಗಲು ಕಾರಣ ಪಾಪದವರು ವಿದ್ಯಾವಂತರಾಗ ಬೇಕೆನ್ನುವುದರಿಂದ ಅಂತೆ !!!

ಅದೊಂದು ಸಮಾರಂಭದಲ್ಲಿ ನನ್ನ ಸುತ್ತಮುತ್ತ  ಕೆಲವು ಹೆಂಗಸರು ಕೂತು ಮಾತಾಡುತ್ತಿದ್ದರು. ಹೆಂಗಸು ೧ : (ಪಕ್ಕದಲ್ಲಿ ಕೂತಿದ್ದ ಹುಡುಗಿಯನ್ನ ) "ಏನಮ್ಮ ಏನ್ ಕಲಿತಿದ್ದೀಯಾ ?" ಹೆಂಗಸು ೨ : "ಅವಳನ್ನ ಇಂಜಿನಿಯರಿಂಗ್ ಗೆ ಸೇರಿಸಿದ್ದೀವಿ. ಇನ್ನು ಮುಂದಿನ ವಾರ ಕ್ಲಾಸ್ಸ್ ಸ್ಟಾರ್ಟ್ ಆಗುತ್ತೆ." ಮಗಳಿಗೆ ಕೇಳಿದ ಪ್ರಶ್ನೆಗೆ ತಾಯಿ ಉತ್ತರಿಸಿದರು. ಮಗಳು ತನ್ನ ಮೊಬೈಲ್ ಲೋಕದಲ್ಲಿ ಮುಳುಗಿ ಹೋಗಿದ್ದಳು. ತನ್ನ ಸುತ್ತಮುತ್ತ ಇರುವ ಜನರನ್ನ ಮಾತಾಡಿಸುವದಕ್ಕಿಂತ ಪೊಕೀಮೋನ್ ಹಿಡಿಯುದರಲ್ಲಿ ಬ್ಯುಸಿ ಆಗಿದ್ದಳು. ಹೆಂಗಸು ೧ : "ಒಹ್! ಹಾಗೇನು .ಅಂದ್ರೆ  ಪಿಯುಸಿ ಯಲ್ಲಿ ಒಳ್ಳೆ ಮಾರ್ಕ್ಸ್ ಬಂದಿರ್ಬೇಕಲ್ಲ? ಒಳ್ಳೇದು ." ಹೆಂಗಸು ೨ : "ಇಲ್ಲ ಕಣ್ರೀ . ಫೇಲ್ ಆಗಿದ್ರು ಫೇಲ್ ಆದ್ಲು ಎಂದು ಹೇಳೋಕ್ಕೆ ನಾನು ಸಂಕೋಚ ಪಡ್ತಿರ್ಲಿಲ್ಲ. ಅಷ್ಟು ಕಮ್ಮಿ ಮಾರ್ಕ್ಸ್ ತೆಗ್ದಿದ್ದಾಳೆ ನೋಡಿ. ನಮಗೆ ಅವಳು ಇಂಜಿನಿಯರಿಂಗ್ ಮಾಡಬೇಕೆಂಬುದು ಆಸೆ. ಬಿ ಎಸ್ಸಿ ಎಲ್ಲ ಕಲಿತರೆ ಏನು ಸಿಗ್ತದೆ ಹೇಳಿ. ಹಾಗೆ ಮಂಗಳೂರಲ್ಲೇ ಒಂದು ಕಾಲೇಜು ಗೆ  ಮ್ಯಾನೇಜ್ಮೆಂಟ್ ಸೀಟ್ ಅಲ್ಲಿ ಆರ್ಕಿಟೆಕ್ಚರ್ ಗೆ ಸೇರಿಸಿದ್ದೀವಿ. ಈ ಕೋರ್ಸ್ ಗೆ ಸೇರಿದ್ರೆ ೨ ಸಲ ಟೂರ್ ಗೆ ಹೋಗಬಹುದು ಅಂತ ಅವಳ ಗೆಳೆಯರು ಹೇಳಿದ್ದಾರಂತೆ. " ಹೆಂಗಸು ೧: "ಅದಕ್ಕೇನಂತೆ ಬಿಡಿ. ಇರುವುದು ಒಬ್ಬಳು ಮಗಳು ,  ಕಲೀಲಿ. " ಹೆಂಗಸು ೨: "ಏನೋ ಅವ...

ಕಾಡು ನಾಡಾದರೆ....!!!!!

                                ನವಿಲೊಂದು ನಿಂತಿತ್ತು ಇಂದು ಎನ್ನ ಮುಂದೆ , ಅದನ್ನ ನೋಡಿ ಎನ್ನ ಮನ ಅತ್ತಿತು ! ಕಾಲವೊಂದಿತ್ತು ನಾ ನವಿಲ ಕಂಡರೆ ಜಿಗಿಯುತಿದ್ದೆ ಆ ಹರುಷ ಇಂದು ಎನ್ನಲ್ಲಿ ಮರೆಯಾಗಿತ್ತು ! ಎರಡು ಮೈಲು ದೂರದಲ್ಲಿದ್ದ ಮಯೂರನ  ಕಂಡರೆ ಕಣ್ಣಿಗೆ ಹಬ್ಬ ! ಇಂದು ಎರಡು ಹೆಜ್ಜೆ ದೂರವಿದ್ದರು,  ನೋಡಲು ಒಲ್ಲೆ ಎಂದೆ ! ಮುಂಗಾರು ಮಳೆಗೆ ಗರಿಬಿಚ್ಚಿ , ನಲಿಯಬೇಕಿದ್ದ ನವಿಲು, ಇಂದು ಗರಿಯ ಮುದುರಿಕೊಂಡು , ಅತ್ತ ಇತ್ತ ನೋಡುತ್ತಿತ್ತು ! ಕಾಡು ನಾಡಾಗಿ ಮಾರ್ಪಾಡಾಗಿತ್ತು, ತನ್ನ ಕಾಡ ಬಿಟ್ಟು , ನಾಡಿಗೆ ಬಂದ ನವಿಲು ಇಂದು , ಅನಾಥವಾಗಿತ್ತು !!!