ಬೆಳಿಗ್ಗೆ ಎದ್ದಕೂಡಲೇ ಸರಿಯಾಗಿ ಕಣ್ಣು ಬಿಟ್ಟಿರದಿದ್ದರು, ನಮ್ಮ ಕೈ ಮಾತ್ರ ಮೊಬೈಲಿಗಾಗಿ ಹುಡುಕಾಡಲು ಶುರು ಮಾಡುತ್ತೆ. ಅರೆಬರೆ ನಿದ್ದೆಯಲ್ಲೂ ಬೇರೆಯವರ ಸ್ಟೇಟಸ್ ನೋಡುವ ಕುತೂಹಲ. ಪಕ್ಕದಲ್ಲಿ ಕೂತವರಿಗೆ ಗುಡ್ ಮಾರ್ನಿಂಗ್ ಹೇಳುವ ಬದಲು ಸಾವಿರಾರು ಮೈಲಿ ದೂರವಿದ್ದ ನೂರಾರು ಜನಕ್ಕೆ ಮುಂಜಾನೆಯ ಶುಭಾಷಯ ಕಳಿಸಿ ಏಳುವುದು ನಮ್ಮ ದಿನಚರಿಯಾಗಿದೆ. ಸ್ಟೇಟಸ್ ಅಲ್ಲಿರುವ ಟಿಕ್ ಟಾಕ್ ವಿಡಿಯೋಗಳು ಇಂದು ನಮಗೆ ಸುಪ್ರಭಾತ.
ಹೀಗೆ ಬೆಳಿಗ್ಗೆ ಕಣ್ಣು ಬಿಟ್ಟಾಗಿನಿಂದ ರಾತ್ರಿ ಕಣ್ಣು ಮುಚ್ಚುವವರೆಗೂ, ದೈನಂದಿನ ಕೆಲಸದ ನಡುವೆಯೂ ಮೊಬೈಲ್ ನೋಡುತ್ತಾ ದಿನ ಕಳೆಯುತ್ತೇವೆ.
ಕಳೆದ ವಾರ ನಮ್ಮೂರಲ್ಲಿ ನಡೆಯುವ ಭೂತಕೋಲಕ್ಕೆ ಹೋಗಿದ್ದೆ. ದಕ್ಷಿಣ ಕನ್ನಡ ಉಡುಪಿ ಪ್ರದೇಶಗಳಲ್ಲಿ ದೇವರನ್ನು ನಂಬಿದಷ್ಟೇ ಭೂತವನ್ನು ಜನರು ನಂಬುತ್ತಾರೆ. ಕೆಲಸಕ್ಕೆಂದು ಪರ ಊರಲ್ಲಿ ನೆಲೆಸಿದ್ದರೂ, ವರ್ಷಕ್ಕೊಮ್ಮೆ ನಡೆಯುವ ಈ ಧಾರ್ಮಿಕ ಆಚರಣೆಗೆ ಎಲ್ಲರೂ ತಾವು ಹುಟ್ಟಿ ಬೆಳೆದ ಊರಿಗೆ ಬರುವುದುಂಟು. ಸಣ್ಣದಿರುವಾಗ ಐಸ್ಕ್ರೀಮ್, ಚರ್ಮುರಿ ತಿನ್ನಲು ಹಣ ಸಿಗುತ್ತದೆಂದು ಭೂತಕೋಲಕ್ಕೆ ಹುಮ್ಮಸ್ಸಿನಿಂದ ಹೋಗುತ್ತಿದ್ದೆ. ಹೈಸ್ಕೂಲಿಗೆ ಬಂದ ನಂತರ, ಭೂತಕೋಲ ವೆಲ್ಲ ಮೂಢನಂಬಿಕೆ, ಪಾತ್ರಿಗಳು ಚೆಂಡೆ, ಬ್ಯಾಂಡಿನ ಶಬ್ದಕ್ಕೆ ಹಾಗೆ ನಲಿಯುದೆಂದು ಅಮ್ಮನಿಗೆ ಹೇಳಿದ್ದುಂಟು. ಆಗ ಅಮ್ಮ, ವಿಜ್ಞಾನ ಕಲಿತಕೂಡಲೇ ನಮ್ಮ ಪೂರ್ವಜರು ನಂಬಿಕೊಂಡು ಬಂದ ಸಂಪ್ರದಾಯವನ್ನು ಮರೀಬೇಡಿ ಎಂದು ತಿಳಿ ಹೇಳುತ್ತಿದ್ದರು. ಹೀಗೆ ಅಮ್ಮನ ಒತ್ತಾಯದಿಂದ ಹೋಗಿ ಅಲ್ಲಿ ಕೂರುತ್ತಿದ್ದೆ.
ಕೆಲವರು ತಾವು ವ್ಯವಹಾರದಲ್ಲಿ ಅನುಭವಿಸುವ ಕಷ್ಟ, ತಮ್ಮ ಮಕ್ಕಳ ವಿದ್ಯಾಭ್ಯಾಸ, ಆರೋಗ್ಯದ ಬಗ್ಗೆ ಹೀಗೆ ಹಲವಾರು ಸಮಸ್ಯೆಗಳನ್ನು ಪಾತ್ರಿಗೆ ಹೇಳುವುದುಂಟು. ಅವರಿಗೆ ಪ್ರಸಾದವನ್ನು ಕೊಟ್ಟು, ತನ್ನನ್ನು ನಂಬಿದ ಭಕ್ತರ ಕೈ ಬಿಡುವುದಿಲ್ಲ, ಒಳ್ಳೇದಾಗುತ್ತದೆ ಎಂದು ಆಶಿರ್ವಾದಿಸುತ್ತಾನೆ. ಇವೆಲ್ಲವನ್ನೂ ಹೇಗೆ ಜನರು ನಂಬುತ್ತಾರೆ ಎಂದು ಅಚ್ಚರಿಯಾಗುತಿತ್ತು. ಆರೋಗ್ಯದ ಸಮಸ್ಯೆಯಿದ್ದರೆ ಪ್ರಸಾದ ಹೇಗೆ ಅದನ್ನು ನಿವಾರಣೆ ಮಾಡುತ್ತದೆ, ಒಳ್ಳೆ ಡಾಕ್ಟರಿಗೆ ತೋರಿಸಿದರೆ ಆಯ್ತು ಎಂದು ಮನಸಲ್ಲೇ ಆಲೋಚಿಸುತ್ತಿದ್ದೆ. ಅಮ್ಮನನ್ನಾಗಲಿ, ಮನೆಯ ಯಾರೇ ಹಿರಿಯರನ್ನಾಗಲಿ ಪ್ರಶ್ನಿಸುವ ಧೈರ್ಯವಿರಲಿಲ್ಲ. ಆದರೆ ನಿಧಾನವಾಗಿ ಕೆಲವು ಜೀವನದ ಅನುಭವಗಳಿಂದಾಗಿ, ದೈವ ಶಕ್ತಿ ಎಂಬುವುದಿದೆ ಎಂದು ನಂಬಲು ಶುರು ಮಾಡಿದೆ. ಈಗ ದೇವಸ್ಥಾನ/ದೈವಸ್ಥಾನಗಳಿಗೆ ಹೋಗಿ ಬಂದರೆ ಮನಸ್ಸಿಗೊಂದು ನೆಮ್ಮದಿಯಾಗುತ್ತದೆ.
ಮೊಬೈಲ್ ಚಟ ಮತ್ತು ದೈವಕ್ಕೂ ಏನು ಸಂಬಂಧ ಎಂದು ಓದುಗರು ಎಣಿಸುತ್ತಿರಬಹುದು. ಆಗಲೇ ಹೇಳಿದಂತೆ ಕಳೆದ ವಾರ ಭೂತ ಕೋಲಕ್ಕೆಂದು ಊರಿಗೆ ಹೋಗಿದ್ದೆ. ದೈವದ ಮೇಲಿನ ಭಕ್ತಿಯಿಂದಲೇ ನೂರಾರು ಮಂದಿ ಬಂದಿರುವುದು ಹೌದು. ಸಣ್ಣದಿರುವಾಗ ಜನರು ದೈವವನ್ನು ಯಾಕೆ ನಂಬುತ್ತಾರೆಂದು ಪ್ರಶ್ನೆಯಿತ್ತು, ಆದರೆ ಇವತ್ತು ಅವರ ನಂಬಿಕೆ ಅರ್ಥವಾದರೂ, ಆ ಕೈಯಲ್ಲೊಂದು ಮೊಬೈಲನ್ನು ಹಿಡಿದು ಅಲ್ಲಿಯೂ ತಮ್ಮ ಕ್ಯಾಮೆರಾ ಕೌಶಲ್ಯತೆಯನ್ನು ಯಾಕೆ ಪ್ರದರ್ಶಿಸಬೇಕೋ ಅರ್ಥವಾಗುವುದಿಲ್ಲ. ಹೌದು, ನಮ್ಮ ಮುಂದಿನ ಪೀಳಿಗೆಗೋ ಅಥವಾ ಪರಊರಿನ ಸ್ನೇಹಿತರಿಗೋ ನಮ್ಮ ಸಂಪ್ರದಾಯದ ಬಗ್ಗೆ ತಿಳುವಳಿಕೆ ಮೂಡಿಸಲು ಅವಶ್ಯಕತೆ ಇರಬಹುದು. ಆದರೆ ಅದಕ್ಕೆಂದೇ ಒಂದು ಛಾಯಾಚಿತ್ರಕಾರನನ್ನು ಇಂದಿನ ದಿನಗಳಲ್ಲಿ ಕರೆಸಿರುತ್ತಾರೆ. ವರ್ಷಕೊಮ್ಮೆ ಬರುವ ಈ ಕ್ಷಣವನ್ನು ಕಣ್ತುಂಬ ಭಕ್ತಿಯಿಂದ ನೋಡುವುದು ಬಿಟ್ಟು ನಮ್ಮ ಗಮನ ಮೊಬೈಲ್ ಮೇಲಿದ್ದರೆ ಏನು ಪ್ರಯೋಜನ.
ಇವತ್ತು ನಾವು ಏನೇ ತಿಂದ್ರು , ಎಲ್ಲಿಗೆ ಹೋದ್ರು, ಏನು ಮಾಡಿದ್ರೂ ಎಲ್ಲದರ ಫೋಟೋ ತೆಗೆದು ಸಾಮಾಜಿಕ ಮಾಧ್ಯಮದ ಮೂಲಕ ನಮ್ಮ ಸ್ನೇಹಿತರಿಗೆ ತಿಳಿಸಿಬಿಡುತ್ತೇವೆ. ದೈನಂದಿನ ದಿನಚರಿ, ಮನೆ ಕೆಲಸ, ವೃತ್ತಿ ಜೀವನದ ಒತ್ತಡದಲ್ಲಿ ಕೆಲವೊಂದು ಕ್ಷಣಗಳನ್ನು ಆಧ್ಯಾತ್ಮಿಕತೆಯೆಡೆಗೆ ತಮ್ಮನ್ನು ತೊಡಗಿಸಿ ಕೊಳ್ಳುವುದರಿಂದ ಕೆಲವರಿಗೆ ಸಂತೃಪ್ತಿಯಾಗುತ್ತದೆ. ಅಧ್ಯಾಪಕರು ಪಾಠ ಮಾಡುವಾಗ, ಆಫೀಸಲ್ಲಿ ಮೀಟಿಂಗ್ ನಡೆಯುತ್ತಿರುವಾಗ , ಸ್ನೇಹಿತರನ್ನು ಭೇಟಿಯಾದಾಗ ಹೇಗೆ ಮೊಬೈಲನ್ನು ಪಕ್ಕಕ್ಕೆ ಇಡುತ್ತೆವೆಯೋ ಹಾಗೆಯೇ ಆಧ್ಯಾತ್ಮಿಕ ಸ್ಥಳಗಳಲ್ಲೂ ಮೊಬೈಲ್ ಬಳಕೆಯಿಂದ ದೂರವಿರಲು ಪ್ರಯತ್ನಿಸೋಣ.
:)
Comments
Post a Comment